
ಸಾಗರ ತಾಲ್ಲೂಕಿನ ಬ್ರಾಹ್ಮಣ ಮಂಚಾಲೆ ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಆನಂದಪುರ ಪೊಲೀಸರು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.ದಿನಾಂಕ 19/02/2026 ರಂದು ಮಧ್ಯಾಹ್ನ 3.00 ಗಂಟೆಯಿಂದ 20/02/2026 ಬೆಳಿಗ್ಗೆ 8.00 ಗಂಟೆಯ ನಡುವಿನ ಅವಧಿಯಲ್ಲಿ ಗ್ರಾಮದ ಶ್ರೀಮತಿ ನಾಗರತ್ನ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಕಳ್ಳರು ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿ ಸುಮಾರು 8½ ಗ್ರಾಂ ತೂಕದ ಬಂಗಾರದ ಆಭರಣಗಳು (ಅಂದಾಜು ರೂ.70,000 ಮೌಲ್ಯ) ಹಾಗೂ ರೂ.7,000 ನಗದು ಹಣವನ್ನು ಕಳವು ಮಾಡಿದ್ದರು. ಈ ಸಂಬಂಧ ಠಾಣೆಯಲ್ಲಿ ಗುನ್ನೆ ನಂ.29/2026ರಡಿ ಬಿ.ಎನ್.ಎಸ್ ಕಲಂ 333(1), 331(4), 305 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ನಡೆಯುತ್ತಿದ್ದ ವೇಳೆ, ಅದೇ ಗ್ರಾಮದಲ್ಲಿ ಮತ್ತೊಂದು ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಬಂಧಿತನನ್ನು ಸಂತೋಷ್ ಕುಮಾರ್ ಕೆ.ಆರ್ (43), ತಂದೆ ರೊಕ್ಕಪ್ಪ, ಕೂಲಿ ಕಾರ್ಮಿಕ, ಕಣ ಬಂದೂರು ಗ್ರಾಮ ನಿವಾಸಿ ಎಂದು ಗುರುತಿಸಲಾಗಿದೆ.ಪೊಲೀಸರು ವಿಚಾರಣೆ ನಡೆಸಿದಾಗ, ಈತನವೇ ಹಿಂದಿನ ಕಳ್ಳತನ ಪ್ರಕರಣದ ಆರೋಪಿಯಾಗಿರುವುದು ಬಹಿರಂಗವಾಗಿದೆ. ತಕ್ಷಣವೇ ಆರೋಪಿಯನ್ನು ಬಂಧಿಸಿ, ಆತನಿಂದ 12.21 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯಿಂದ ಸ್ಥಳೀಯರಲ್ಲಿ ಭದ್ರತಾ ಭಾವನೆ ಹೆಚ್ಚಾಗಿದೆ.
ವರದಿ: ಗಣೇಶ್ ರಿಪ್ಪನ್ ಪೇಟೆ