ಸಾಗರ ತಾಲೂಕಿನ ಬಳ್ಳಿಬೈಲು ಗ್ರಾಮದಲ್ಲಿ ದುರ್ಘಟನೆ

ಸಾಗರ: ತಾಲೂಕಿನ ಆನಂದಪುರ ಸಮೀಪದ ಬಳ್ಳಿಬೈಲು ಗ್ರಾಮದಲ್ಲಿ ಸಾಲಬಾಧೆಯಿಂದ ಮನನೊಂದು ರೈತ ಗೋಪಾಲ (56) ಅವರು ಮಾವಿನ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ಘಟನೆ ನಡೆದಿದೆ.ಗೋಪಾಲ ಅವರು ಎರಡು ವರ್ಷಗಳ ಹಿಂದೆ ಎಸ್ಬಿಐ ಬ್ಯಾಂಕ್ನಲ್ಲಿ ಸುಮಾರು 4 ಲಕ್ಷ ರೂ. ಕೃಷಿ ಸಾಲ ಪಡೆದು ಅಡಿಕೆ ಸಸಿ ನೆಟ್ಟಿದ್ದರು. ಇದಲ್ಲದೆ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ಸುಮಾರು 50 ಸಾವಿರ ರೂ. ಹಾಗೂ ಇತರ ಸಣ್ಣಪುಟ್ಟ ಕೈ ಸಾಲಗಳನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ.

ಸಾಲ ತೀರಿಸುವ ಒತ್ತಡದಿಂದ ಅವರು ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಒತ್ತಡದಲ್ಲಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಗುರುವಾರ ಸಂಜೆ ಗೋಪಾಲ ಅವರು ಕಾಣೆಯಾಗಿದ್ದರಿಂದ ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಮನೆಯ ಹಿತ್ತಲಿನ ಮಾವಿನ ಗಿಡಕ್ಕೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.