ಹೊಸನಗರ: ಮುಳುಗಡೆ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿರುವ ತಾಲೂಕಿನ ಜನರಿಗೆ ದೀರ್ಘಕಾಲೀನ ಪರಿಹಾರ ಒದಗಿಸಬೇಕಾದರೆ ಹೊಸನಗರಕ್ಕೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆ ಮಾಡುವುದು ಅನಿವಾರ್ಯ ಎಂದು ಮೂಲೆಗದ್ದೆ ಮಠದಅಭಿನವಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಕೈಗೊಳ್ಳಲಿರುವ ಹೋರಾಟದ ರೂಪರೇಖೆ ಕುರಿತು ಗುರುವಾರ ಗಾಯತ್ರಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರ ರಚನೆಯಾದಲ್ಲಿ ಅಭಿವೃದ್ಧಿ ಯೋಜನೆಗಳು ವೇಗ ಪಡೆಯಲಿವೆ ಎಂದು ಹೇಳಿದರು. ಈ ಹೋರಾಟ ಯಶಸ್ವಿಯಾಗಲು ಪ್ರತಿಯೊಬ್ಬರೂ ನಿಸ್ವಾರ್ಥ ಮನೋಭಾವದಿಂದ ಕೈಜೋಡಿಸಬೇಕು. ಅಧಿಕಾರಿಗಳ ಗಮನ ಸೆಳೆಯುವ ಮಟ್ಟದಲ್ಲಿ ಸಂಘಟಿತ ಮತ್ತು ಬಲಿಷ್ಠ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು. ಯುವಕರು, ಸಮಾಜಸೇವಕರು, ವಿವಿಧ ಸಂಘಟನೆಗಳ ಪ್ರಮುಖರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಮುಂದೆ ಬರಬೇಕು ಎಂದರು.
ವಿಡಿಯೋವನ್ನ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 👇
ಮಾಜಿ ಸಚಿವ ಕಿಮ್ಮನೆ ರತ್ನಾಕರ್ : ಮಾತನಾಡಿ, ಪ್ರಸ್ತುತ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಸುಮಾರು 400 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಸಂಪೂರ್ಣ ಕ್ಷೇತ್ರವನ್ನು ಪ್ರವಾಸ ಮಾಡುವುದು ಸವಾಲಿನ ಸಂಗತಿ ಎಂದು ಹೇಳಿದರು. ಭೌಗೋಳಿಕ ಪರಿಸ್ಥಿತಿಯನ್ನು ಆಧರಿಸಿ ಮೇಘಾಲಯ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಕಡಿಮೆ ಜನಸಂಖ್ಯೆಯಿದ್ದರೂ ವಿಶೇಷ ವಿಧಾನಸಭಾ ಕ್ಷೇತ್ರಗಳನ್ನು ರಚಿಸಿರುವ ಉದಾಹರಣೆಗಳಿವೆ. ಅದೇ ರೀತಿಯ ನ್ಯಾಯ ಹೊಸನಗರ ತಾಲೂಕಿನಿಗೂ ಸಿಗಬೇಕು. ಕ್ಷೇತ್ರ ಪುನರ್ರಚನೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕಬೇಳೂರು ಗೋಪಾಲಕೃಷ್ಣ : ಮಾತನಾಡಿ, ಹೊಸನಗರ ಕ್ಷೇತ್ರ ಮರುಸ್ಥಾಪನೆ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಈ ವಿಷಯವನ್ನು ತಾವು ಹಾಗೂ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ಹೇಳಿದರು.
ಮಾಜಿ ಶಾಸಕಹರತಾಳು ಹಾಲಪ್ಪ : ಮಾತನಾಡಿ, ಹೋರಾಟ ಆರಂಭಿಸುವುದಷ್ಟೇ ಮುಖ್ಯವಲ್ಲ; ಅದನ್ನು ನಿರಂತರವಾಗಿ ಮುಂದುವರಿಸುವ ಮನೋಬಲವೂ ಅಗತ್ಯ ಎಂದು ತಿಳಿಸಿದರು. ಒಂದು ಸಭೆ ನಡೆಸಿ ನಂತರ ದೀರ್ಘಕಾಲ ಮೌನವಾಗಿದ್ದರೆ ಫಲಶ್ರುತಿ ದೊರೆಯದು. ಈಗ ಆರಂಭಿಸಿರುವ ಹೋರಾಟ ನಿರಂತರವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, : ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಡಾ. ಜಿ.ಡಿ. ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಸೇರಿದಂತೆ ಹಲವರು ಕ್ಷೇತ್ರ ರಚನೆಯ ಅಗತ್ಯತೆ ಮತ್ತು ಅದರ ಮಹತ್ವವನ್ನು ವಿವರಿಸಿದರು.ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರಮುಖರಾದ ಎನ್.ಆರ್. ದೇವಾನಂದ, ವರ್ತೇಶ್, ಬಿ.ಜಿ. ಚಂದ್ರಮೌಳಿ, ತಿ.ನಾ. ಶ್ರೀನಿವಾಸ್, ಚಿದಂಬರ, ಶ್ರೀಧರ್ ಉಡುಪ, ಶ್ರೀನಿವಾಸ್ ಕಾಮತ್ ಜಯರಾಮ್ ಶೆಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಮಾಜಸೇವಕರು ಸಭೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.