ದಾವಣಗೆರೆ/ಶಿವಮೊಗ್ಗ: ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪದ ಮೇರೆಗೆ BESCOM ದಾವಣಗೆರೆ ವಿಭಾಗದ ಎಇಇ ಅರ್ಜುನ್ ಆರ್.ಎಚ್ ವಿರುದ್ಧ ಭಾರೀ ಕ್ರಮ ಕೈಗೊಂಡಿರುವ Karnataka Lokayukta ಅಧಿಕಾರಿಗಳು ಗುರುವಾರ (ಫೆ.12) ಬೆಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಐದು ತಂಡಗಳಾಗಿ ವಿಭಜನೆಗೊಂಡ ಲೋಕಾಯುಕ್ತ ಪೊಲೀಸರು ಶಿವಮೊಗ್ಗ, ದಾವಣಗೆರೆ ಹಾಗೂ ರಿಪ್ಪನ್ಪೇಟೆ ಭಾಗಗಳಲ್ಲಿ ಶೋಧ ಕಾರ್ಯ ನಡೆಸಿದರು. ಶಿವಮೊಗ್ಗದ ಗೋಪಾಳದಲ್ಲಿನ ಮನೆ ಮತ್ತು ವಾಣಿಜ್ಯ ಸಂಕೀರ್ಣ, ದಾವಣಗೆರೆಯ ನಿಟ್ಟುವಳ್ಳಿ ಬಡಾವಣೆಯ ಬಾಡಿಗೆ ಮನೆ ಹಾಗೂ ಬೆಸ್ಕಾಂ ಕಚೇರಿ, ರಿಪ್ಪನ್ಪೇಟೆ ಸಮೀಪದ ತಳಲೆ ಗ್ರಾಮದ ತೋಟದ ಮನೆ ಸೇರಿದಂತೆ ಹಲವೆಡೆ ದಾಖಲೆಗಳ ಜಪ್ತಿ ಹಾಗೂ ಪರಿಶೀಲನೆ ನಡೆಯಿತು.ಪ್ರಾಥಮಿಕ ತನಿಖೆಯಲ್ಲಿ ಎರಡು ನಿವೇಶನಗಳು, ಮೂರು ಮನೆಗಳು ಹಾಗೂ ಇತ್ತೀಚೆಗೆ ಖರೀದಿಸಿದ ಸುಮಾರು ಎರಡು ಎಕರೆ ಕೃಷಿ ಭೂಮಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಶಿವಮೊಗ್ಗದ ನಿವಾಸದಿಂದ ಆಸ್ತಿ ದಾಖಲೆಗಳು, ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಚಿನ್ನಾಭರಣವನ್ನು ಅಡವಿಟ್ಟು ಬ್ಯಾಂಕ್ಗಳಿಂದ ಸಾಲ ಪಡೆದಿರುವ ಅಂಶವೂ ಬೆಳಕಿಗೆ ಬಂದಿದೆ.ವಿಜಯನಗರ, ಗೋಪಾಲಗೌಡ ಬಡಾವಣೆ ಹಾಗೂ ಸಾಗರ–ರಿಪ್ಪನ್ಪೇಟೆ ಸಮೀಪದ ತಳಲೆ ಗ್ರಾಮದಲ್ಲಿನ 2.5 ಮತ್ತು 4.5 ಎಕರೆ ಜಮೀನಿನ ಫಾರ್ಮ್ಹೌಸ್ಗಳ ಮೇಲೂ ಲೋಕಾಯುಕ್ತರ ಕಣ್ಣು ಬಿದ್ದಿದೆ. ದಾವಣಗೆರೆಯ ನಿಟ್ಟುವಳ್ಳಿಯ ಬಾಡಿಗೆ ಮನೆ ಮತ್ತು ಕಚೇರಿಯಲ್ಲೂ ದಾಖಲೆಗಳ ಸೂಕ್ಷ್ಮ ಪರಿಶೀಲನೆ ಮುಂದುವರಿದಿದೆ.“ನಿವೇಶನ, ಮನೆ ಹಾಗೂ ಜಮೀನು ಪತ್ತೆಯಾಗಿದೆ. ನಗದು ಅಥವಾ ಹೆಚ್ಚುವರಿ ಚಿನ್ನಾಭರಣ ಸಿಕ್ಕಿಲ್ಲ. ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು,” ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪುರೆ ತಿಳಿಸಿದ್ದಾರೆ.ಡಿವೈಎಸ್ಪಿ ಚಂದ್ರಶೇಖರ್ ಹಾಗೂ ಇನ್ಸ್ಪೆಕ್ಟರ್ಗಳಾದ ಪ್ರಭು ಸೂರೇನ್ ಮತ್ತು ಗುರುರಾಜ್ ಮೈಲಾರಿ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ಕೆರೇಹಳ್ಳಿ ಅಂಜನ್ ✒️