
ತೀರ್ಥಹಳ್ಳಿ : ಹೆಚ್ಚಿನ ಲಾಭ ಹಾಗೂ ಗ್ಯಾರಂಟಿ ರಿಟರ್ನ್ ನೀಡುವುದಾಗಿ ನಂಬಿಸಿ ನಕಲಿ ಹೂಡಿಕೆ ಯೋಜನೆ ಮೂಲಕ ಸುಮಾರು ₹48 ಲಕ್ಷ ವಂಚನೆ ನಡೆಸಿದ ಆರೋಪದ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಎಂ. ಕುಮಾರ್ ಅವರು ತಾವು ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾಗಿದ್ದು, “ಯು-ಬಿಟ್ ಕಾಯಿನ್” ಎಂಬ ಹೂಡಿಕೆ ಯೋಜನೆಯಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭ ಹಾಗೂ ಖಾತರಿಯ ಆದಾಯ ದೊರೆಯುತ್ತದೆ ಎಂದು ನಂಬಿಸಿದ್ದರು. ತಮ್ಮ ಮೊಬೈಲ್ನಲ್ಲಿ ಕಂಪನಿಯ ಲಾಭದ ವಿವರಗಳನ್ನು ತೋರಿಸಿ ವಿಶ್ವಾಸ ಮೂಡಿಸಿ, ದೂರುದಾರರಿಂದ ₹11 ಲಕ್ಷ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ಬಳಿಕ ಹೂಡಿಕೆ ಮಾಡಿದ ಹಣವನ್ನಾಗಲಿ, ಭರವಸೆ ನೀಡಿದ್ದ ಲಾಭವನ್ನಾಗಲಿ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ರೀತಿಯಲ್ಲಿ ಇನ್ನೂ ಹಲವರಿಂದ ಹಣ ಪಡೆದು, ಒಟ್ಟು ಸುಮಾರು ₹48 ಲಕ್ಷ ವಂಚಿಸಿರುವುದಾಗಿಯೂ ತಿಳಿಸಲಾಗಿದೆ.
ಹಣವನ್ನು ವಾಪಸ್ ಕೇಳಿದಾಗ ಜೀವ ಬೆದರಿಕೆ ಹಾಕಿರುವ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ.
ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 316(2), 318(4), 351(2), 61(2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66(D) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.