
ಬೆಳ್ಳೂರಿನಲ್ಲಿ ಮತ್ತೆ ಮಿಂಚಿನ ದಾಳಿ: ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ – ಪೊಲೀಸರು ಕೊಂಡಾಡಿದ ಗ್ರಾಮಸ್ಥರು
ಶಿವಮೊಗ್ಗ : ಜಿಲ್ಲೆಯ ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಮತ್ತೊಂದು ಮಹತ್ವದ ದಾಳಿ ನಡೆದಿದ್ದು, ಪೊಲೀಸರ ಕಾರ್ಯಾಚರಣೆ ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.ಪೊಲೀಸ್ ಮಾಹಿತಿಯ ಪ್ರಕಾರ, ಬೆಳ್ಳೂರು ಗ್ರಾಮದ ಚಂದ್ರಪ್ಪ (ತಂದೆ: ನಿಂಗಪ್ಪ) ಅವರ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಚಿಲ್ಲರೆ ಮದ್ಯ ನೀಡಲಾಗುತ್ತಿದೆ ಎಂಬ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು.
ಸ್ಥಳಕ್ಕೆ ತೆರಳಿ ಮರೆಯಲ್ಲಿ ನಿಂತು ಗಮನಿಸಿದಾಗ, ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟು ತೊಂದರೆ ಉಂಟುಮಾಡುತ್ತಿರುವುದು ಕಂಡುಬಂದಿತು.ತಕ್ಷಣವೇ ಪಂಚರ ಸಮ್ಮುಖದಲ್ಲಿ ದಾಳಿ ನಡೆಸಿದ ವೇಳೆ, ಅಲ್ಲಿದ್ದ ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ “Original Choice Deluxe Whisky” ಎಂಬ ಲೇಬಲ್ ಹೊಂದಿರುವ ಎಂಟು ಖಾಲಿ ಮದ್ಯದ ಪೌಚ್ಗಳು ಹಾಗೂ ಒಂದು ಸ್ಟೀಲ್ ಲೋಟವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ನೀಡುತ್ತಿರುವುದು ದೃಢಪಟ್ಟಿದೆ.ಪಂಚನಾಮೆ ಪ್ರಕ್ರಿಯೆ ಪೂರ್ಣಗೊಳಿಸಿ ವಶಪಡಿಸಿಕೊಂಡ ವಸ್ತುಗಳನ್ನು ಅಮಾನತ್ತುಪಡಿಸಿ, ಆರೋಪಿಗೆ ನೋಟೀಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಈ ಕಾರ್ಯಾಚರಣೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ರಾಜು ರೆಡ್ಡಿ ಅವರ ನೇತೃತ್ವದಲ್ಲಿ ನಡೆಯಿತು. ಸಿಬ್ಬಂದಿಗಳಾದ ರಾಮಚಂದ್ರಪ್ಪ, ಉಮೇಶ್ ಹಾಗೂ ವಿಶ್ವನಾಥ್ ಈ ದಾಳಿಯಲ್ಲಿ ಭಾಗವಹಿಸಿದ್ದರು.ಬೆಳ್ಳೂರು ಗ್ರಾಮದಲ್ಲಿ ಎರಡನೇ ಬಾರಿ ನಡೆದ ಈ ಮಿಂಚಿನ ದಾಳಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಹಿನ್ನೆಲೆ ಗ್ರಾಮಸ್ಥರು ಪೊಲೀಸರ ಕಾರ್ಯಚಟುವಟಿಕೆಯನ್ನು ಕೊಂಡಾಡಿ, ಇಂತಹ ಕ್ರಮಗಳು ಮುಂದುವರಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



Leave a Reply