
ನಗರ : ನಿಟ್ಟೂರು ಮನೆ ಒಂದರಲ್ಲಿ ನಡೆದ ಚಿನ್ನ-ಬೆಳ್ಳಿ ಕಳ್ಳತನ ಪ್ರಕರಣವನ್ನು ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಡಿಸೆಂಬರ್ 27, 2025ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ FIR ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.ದೂರುದಾರರು ನೀಡಿದ ಮಾಹಿತಿಯ ಪ್ರಕಾರ, ಡಿಸೆಂಬರ್ 19, 2025ರಂದು ಮನೆಯನ್ನು ಲಾಕ್ ಮಾಡಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಅಜ್ಞಾತರು ಮನೆಯ ಬಾಗಿಲು ಒಡೆದು ಒಳನುಗ್ಗಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದರು. ಕಳ್ಳತನಗೊಂಡ ವಸ್ತುಗಳಲ್ಲಿ ಸುಮಾರು 48 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಹಾಗೂ 1.5 ಕಿಲೋಗ್ರಾಂ ತೂಕದ ಬೆಳ್ಳಿ ವಸ್ತುಗಳು ಸೇರಿದ್ದು, ಒಟ್ಟು ₹14,55,000/- ಮೌಲ್ಯದ ಸಾಮಗ್ರಿಗಳು ಕಳುವಾಗಿರುವುದಾಗಿ ಅಂದಾಜಿಸಲಾಗಿದೆ.ಘಟನೆ ಕುರಿತು ಮಾಹಿತಿ ದೊರಕಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್ಪಿ ನಿಖಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಅರವಿಂದ ಕಲಗುಚಿ ಹಾಗೂ
ಸರ್ಕಲ್ ಇನ್ಸ್ಪೆಕ್ಟರ್ M I ಗೌಡಪ್ಪ ಗೌಡರ್ ಹಾಗೂ ಸಬ್ ಇನ್ಸ್ಪೆಕ್ಟರ್ ಶಿವಾನಂದ್ ಕೋಳಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.ಬಂಧಿತ ಆರೋಪಿಗಳ ಹೆಸರುಗಳು ಅಮೀರ್ ಅನ್ಸಾರಿ, ಬ್ಯಾರಿ ಮೊಹಮದ್ ಇಮರಾನ್ ಮತ್ತು ಮೊಹಮ್ಮದ್ ಅಖಿಲ್ ಎಂದು ಗುರುತಿಸಲಾಗಿದೆ. ನಗರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಸಿಬ್ಬಂದಿಗಳಾದ ಕಿರಣ್ ಕುಮಾರ್, ಪ್ರವೀಣ್ ಕುಮಾರ್, ರವಿಚಂದ್ರನ್ ಸೇರಿದಂತೆ ಹಾಗೂ ಇನ್ನಿತರ ಸಿಬ್ಬಂದಿಗಳು ಇದ್ದರು.ಪೊಲೀಸರ ಕಾರ್ಯಾಚರಣೆಯಿಂದ ಕಳ್ಳತನ ಪ್ರಕರಣ ಬೇಧಿಸಿದ್ದಾರೆ, ಸ್ಥಳೀಯರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ವರದಿ : ಗಣೇಶ್ ರಿಪ್ಪನ್ ಪೇಟೆ