ಸಮಾನತೆ, ನ್ಯಾಯ ಮತ್ತು ಮಾನವೀಯತೆಗೆ ಅಂಬೇಡ್ಕರ್ ಜೀವನ ಮಾದರಿ – ಹೊಸನಗರದಲ್ಲಿ ಭವ್ಯ ಆಚರಣೆ

ಹೊಸನಗರ: “ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು ಪ್ರದರ್ಶನವಾಗಬಾರದು, ಅದು ನಿದರ್ಶನವಾಗಬೇಕು” ಎಂದು ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎನ್.ಪಿ. ಪ್ರದೀಪ್ ಹೇಳಿದರು.ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ದಲಿತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶಯದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಹಾಗೂ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಸಮಾನತೆ, ನ್ಯಾಯ ಹಾಗೂ ಮಾನವೀಯತೆಗೆ ಜೀವನವನ್ನೇ ಅರ್ಪಿಸಿದ ಮಹಾನ್ ಚೇತನರಾದ ಅಂಬೇಡ್ಕರ್, ಅಸ್ಪೃಶ್ಯತೆ ಮತ್ತು ಜಾತಿಯತೆಯ ವಿರುದ್ಧ ಹೋರಾಡಿದ ಮಹಾನಾಯಕ ಎಂದು ಅವರು ವಿವರಿಸಿದರು. ಅಸ್ಪೃಶ್ಯ ಎಂದು ದೂರ ತಳ್ಳಲ್ಪಟ್ಟರೂ ತಮ್ಮ ಪ್ರತಿಭೆ, ವಿದ್ಯೆ ಹಾಗೂ ಛಲದ ಮೂಲಕ ಭಾರತದ ಸಂವಿಧಾನವನ್ನು ರಚಿಸಿ “ಸಂವಿಧಾನ ಶಿಲ್ಪಿ” ಎಂಬ ಹೆಗ್ಗಳಿಕೆಗೆ ಪಾತ್ರರಾದರು ಎಂದರು.ಜಾತಿಯತೆಯು ಸಂಪೂರ್ಣವಾಗಿ ಅಳಿಯುವವರೆಗೆ ಅಸ್ಪೃಶ್ಯತೆ ಹೋಗುವುದಿಲ್ಲ ಎಂಬುದು ಅಂಬೇಡ್ಕರ್ ಅವರ ದೃಢ ನಂಬಿಕೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ಎನ್. ಭರತರಾಜ್, ಸರ್ಕಲ್ ಇನ್ಸ್ಪೆಕ್ಟರ್ ಎಂ.ಐ. ಗೌಡಪ್ಪ ಗೌಡ್ರು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ಎನ್. ಹರೀಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಎಚ್.ಬಿ. ಚಿದಂಬರ್, ಪವನ್ ಕುಮಾರ್, ದಲಿತ ಸಂಘರ್ಷ ಸಮಿತಿಯ ಮಂಜುನಾಥ್ ಮಂಜಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡರು.ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಎಂ. ಗೀತಾ ಸ್ವಾಗತಿಸಿದರು.ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.



Leave a Reply