ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ಉದ್ಘಾಟನೆ

ರಿಪ್ಪನ್ಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದ ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗಾಗಿ ಜಾರಿಯಲ್ಲಿರುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ರಿಪ್ಪನ್ಪೇಟೆಯ ಗಾಂಧಿನಗರ ರುದ್ರಭೂಮಿಯಲ್ಲಿ ನೂತನ ಸಿಲಿಕಾನ್ ಚೇಂಬರ್ ಅಳವಡಿಸಿ ಗ್ರಾಮ ಪಂಚಾಯ್ತಿಗೆ ಹಸ್ತಾಂತರಿಸಲಾಯಿತು.ಸಿಲಿಕಾನ್ ಚೇಂಬರ್ ಉದ್ಘಾಟನಾ ಕಾರ್ಯಕ್ರಮವು 02-03-2026ರ ಸೋಮವಾರ ಬೆಳಿಗ್ಗೆ 10.00 ಗಂಟೆಗೆ ನೆರವೇರಿತು. ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರು, ಪಿಡಿಒ, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಯೋಜನೆಯ ಕಾರ್ಯವನ್ನು ಪ್ರಶಂಸಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಳವಡಿಸಲಾದ ಈ ಸೌಲಭ್ಯವನ್ನು ಅಧಿಕೃತವಾಗಿ ಗ್ರಾಮ ಪಂಚಾಯ್ತಿಗೆ ಹಸ್ತಾಂತರಿಸಲಾಯಿತು. ಪರಿಸರ ಸ್ನೇಹಿ ಹಾಗೂ ವ್ಯವಸ್ಥಿತ ಅಂತ್ಯಕ್ರಿಯೆ ವ್ಯವಸ್ಥೆಯನ್ನು ಉತ್ತೇಜಿಸುವ ಈ ಚೇಂಬರ್ ಮೂಲಕ ರುದ್ರಭೂಮಿಯ ಮೂಲಸೌಕರ್ಯ ಮತ್ತಷ್ಟು ಸುಧಾರಣೆ ಕಾಣಲಿದೆ.ಗ್ರಾಮಸ್ಥರು ಯೋಜನೆಯ ಈ ಸೇವೆಯನ್ನು ಹರ್ಷದಿಂದ ಸ್ವಾಗತಿಸಿ, ಮುಂದಿನ ದಿನಗಳಲ್ಲೂ ಗ್ರಾಮಾಭಿವೃದ್ಧಿಗೆ ಇಂತಹ ಉಪಯುಕ್ತ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ವರದಿ : ಕೆರೆಹಳ್ಳಿ ಅಂಜನ್